Monday, 17 August 2020

ಆಲೂಗೆಡ್ಡೆ ಮತ್ತು ಆರೋಗ್ಯ

ಆಲೂಗೆಡ್ಡೆ ಮತ್ತು ಆರೋಗ್ಯ. 

ನಮ್ಮ ದೇಶದಲ್ಲಿ ಗೋದಿ ಮತ್ತು ಅಕ್ಕಿಯ ನಂತರ ಅತೀ ಹೆಚ್ಚಾಗಿ ಉಪಯೋಗಿಸಲ್ಪಡುತ್ತಿರುವ ಆಹಾರ ಪದಾರ್ಥವೆಂದರೆ ಆಲೂಗೆಡ್ಡೆ ಅಥವ ಬಟಾಟೆ. ಜೊತೆಗೆ ನಮ್ಮ ಆರೋಗ್ಯಕ್ಕೆ ಇದರ ಸೇವನೆ ಬಗ್ಗೆ  ಇರುವ ಭಿನ್ನಾಭಿಪ್ರಾಯಗಳು ಸಹಾ ಹೆಚ್ಚು. ಆಲೂಗಡ್ಡೆ ವಾಯು ಪದಾರ್ಥ ಎಂಬುದರಿಂದ ಹಿಡಿದು, ಬೊಜ್ಜು ಹೆಚ್ಚಾಗುತ್ತೆ, ಸಕ್ಕರೆ ಖಾಯಿಲೆಯವರು ತಿನ್ನಬಾರದು ಇತ್ಯಾದಿ.. ಇತ್ಯಾದಿ.. ಹಾಗಾದರೆ ನಿಜ ಯಾವುದು..? ವಿವರವಾಗಿ ತಿಳಿದುಕೊಳ್ಳೋಣ.

ಆಲೂಗೆಡ್ಡೆ ನೆಲದಡಿ ಬಿಡುವ ಗೆಡ್ಡೆ. ಸಸ್ಯ ಶಾಸ್ತ್ರೀಯ ಹೆಸರು Solanum tuberosum ಹಾಗೂ ಕುಟುಂಬ Solanaceae. ( ಚಿತ್ರ ನೋಡಿ ). ಮೂಲ ಪೆರು ದೇಶದ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿದ್ದ,  ಸುಮಾರು 10,000 ವರ್ಷಗಳ ಇತಿಹಾಸವಿರುವ,  ಇದು ಅಮೆರಿಕ ದೇಶಕ್ಕೆ ಬಂದು ನಂತರ ಇತರೆಡೆ ಪ್ರಚಾರಗೊಂಡಿತು. ಸದ್ಯ ವಿಶ್ವದಾದ್ಯಂತ 5,100 ಕ್ಕೂ ಹೆಚ್ಚು ಆಲೂಗೆಡ್ಡೆ ಪ್ರಬೇದಗಳಿವೆ.

ಆಲೂಗೆಡ್ಡೆಯಲ್ಲಿ ಅತೀ ಹೆಚ್ಚು ಪಿಷ್ಟ ( Carbohydrates ) ಇದೆ ಹಾಗಾಗಿ ಆರೋಗ್ಯಕ್ಕೆ ಹಾನಿಕರ, ಸಕ್ಕರೆ ಖಾಯಿಲೆ ಇರುವವರು ತಿನ್ನಬಾರದು ಎಂದು ಹೆಚ್ಚಿನ ಅಭಿಪ್ರಾಯ. ಆದರೆ ನಿಜವಾಗಿಯೂ ಇದರಲ್ಲಿರುವ Carbohydrates ಕೇವಲ 17 gms ( ಅಕ್ಕಿಯಲ್ಲಿ 28 - 35 gms ಹಾಗೂ ಗೋದಿಯಲ್ಲಿ 18 gms ) ಈಗ ಯಾವುದು ಉತ್ತಮ ನೀವೇ ನಿರ್ದರಿಸಿ.

ಆಲೂಗೆಡ್ಡೆಯಲ್ಲಿರುವ Cholesterol - 0% ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅಲ್ಲದೆ ರಕ್ತದೊತ್ತಡ ಹೆಚ್ಚಿಸುವ Sodium ಸಹಾ ಕೇವಲ 0%. 

75 mg ನಷ್ಟು ಇರುವ Phosphorus ಹಾಗೂ ಸುಣ್ಣದ ಅಂಶ ( Calcium )  ನಮ್ಮ ದೇಹದ ಮೂಳೆಗಳು ಸದೃಢವಾಗಲು ಸಹಕಾರಿ.

544 mg ನಷ್ಟು ಇರುವ Potassium ನಮ್ಮ ರಕ್ತದಲ್ಲಿರುವ ಹೆಚ್ಚಿನ ಉಪ್ಪಿನಂಶವನ್ನು ಹೀರಿಕೊಂಡು ಅಧಿಕ ರಕ್ತದೊತ್ತಡ -  BP - ತಗ್ಗಿಸಲು ಸಹಾಯಮಾಡುತ್ತದೆ.

ಆಲೂಗೆಡ್ಡೆಯಲ್ಲಿರುವ ಅಧಿಕ ನಾರಿನಂಶ ( fibre ) ದೇಹದಲ್ಲಿರುವ Cholesterol ಅನ್ನು ನಿಯಂತ್ರಣದಲ್ಲಿರುಸುತ್ತದೆ, ಮಲಬದ್ಧತೆ ನಿವಾರಿಸಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.  ಈ ಮೊದಲೇ 0 % ಇರುವ cholesterol ಜೊತೆಗೆ Potassium, ವಿಟಮಿನ್ - C, ಹಾಗು ವಿಟಮಿನ್ B - 6 ಎಲ್ಲಾ ಸೇರಿ ನಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕ.

Choline ಎಂಬ ವಿಶಿಷ್ಟ ರಾಸಾಯನಿಕ 57 mg ನಷ್ಟು ಇದ್ದು ಇದು ದೇಹದ ಮಾಂಸಖಂಡಗಳು ಸದೃಢವಾಗಿ ಬೆಳೆಯಲು ಸಹಾಯಮಾಡುತ್ತದೆ ಅಲ್ಲದೆ ಹಲವು ಮಾನಸಿಕ ತೊಂದರೆ, mood fluctuations ಹೋಗಲಾಡಿಸಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ.

38 mg ಯಷ್ಟು ಇರುವ Folate ಅಂಶ ಕ್ಯಾನ್ಸರ್ ನಿವಾರಕವಾಗಿದ್ದು. ಜೀವ ಕಣಗಳು ( Cells )  ಕ್ಯಾನ್ಸರ್ ಕಣಗಳಾಗಿ ಬದಲಾಗದಂತೆ ತಡೆಯುತ್ತದೆ.

ಆಲೂಗೆಡ್ಡೆ ನಮ್ಮ ಚರ್ಮದ ಬಹುತೇಕ ತೊಂದರೆಗಳನ್ನು ನಿವಾರಿಸುತ್ತದೆ. ಇದರೆ ರಸ ತೆಗೆದು ನಿಯಮಿತವಾಗಿ ಹಚ್ಚಿಕೊಳ್ಳುತ್ತಿದ್ದರೆ ಚರ್ಮ ಸುಕ್ಕು ರಹಿತವಾಗುವುದು ಹಾಗು ಕಾಂತಿಯುತವಾಗುವುದು. ಹಳೆಯ ಕಲೆಗಳು, Sun burn ಕಲೆಗಳು, Pigmentation ನಿವಾರಿಸುವುದು. ಆಲೂಗೆಡ್ಡೆಯ fresh ಆದ ಸಿಪ್ಪೆಯನ್ನು ತೆಗೆದು ಹಚ್ಚಿದರೆ ಸುಟ್ಟ ಗಾಯ ಬೇಗ ವಾಸಿಯಾಗುತ್ತೆ ಮತ್ತು ಕಲೆ ಇಲ್ಲದ ಹೊಸ ಚರ್ಮ ಬರುತ್ತೆ.

ಅತ್ಯಂತ ಪ್ರಮುಖವಾಗಿ ಆಲೂಗೆಡ್ಡೆಯಲ್ಲಿ Alpha Lipoic acid ಎಂಬ ಮತ್ತೊಂದು ವಿಶಿಷ್ಟವಾದ ರಾಸಾಯನಿಕವಿದ್ದು ಇದು ರಕ್ತದಲ್ಲಿರುವ ಹೆಚ್ಚಿನ ಸಕ್ಕರೆ ( Glucose  ಅಂಶವನ್ನು ಹಾಗೆ ಬಿಡದೆ, ಅಂದರೆ blood sugar ಜಾಸ್ತಿಯಾಗಲು ಬಿಡದೆ ) ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಹಾಗಾಗಿ ಸಕ್ಕರೆ ಖಾಯಿಲೆ ( Diabetes ) ಇರುವವರು ಆಲೂಗೆಡ್ಡೆ ಸೇವಿಸಲು ಯಾವುದೇ ತೊಂದರೆಯಿಲ್ಲ.

ಮತ್ತೊಂದು ತಪ್ಪದೆ ಎಲ್ಲರೂ ತಿಳಿದುಕೊಳ್ಳಬೇಕಾದ ಮುಖ್ಯ ವಿಷಯವೆಂದರೆ ಆಲೂಗೆಡ್ಡೆಯಲ್ಲಿ ಒಟ್ಟಾರೆ 3 ಪದರಗಳಿದ್ದು ಅವು,  ಹೊರ ಸಿಪ್ಪೆ, ಒಳ ಸಿಪ್ಪೆ ಮತ್ತು ಒಳಗಿನ ನೀರಿನಂಶ ಹೆಚ್ಚಿರುವ ಬರೀ ಪಿಷ್ಟವಿರುವ ( Corbohydrates ) ಭಾಗ. ( ಒಮ್ಮೆ ಬೇಯಿಸಿದ ಮದ್ಯೆ ಕತ್ತರಿಸಿದ ಆಲೂಗೆಡ್ಡೆಯನ್ನು ಗಮನಿಸಿ, ಗೊತ್ತಾಗುತ್ತದೆ )

 ಹೊರ ಸಿಪ್ಪೆಯನ್ನು ತೆಗೆದು ಹಾಕಿಬಿಟ್ಟರೆ ಆಲೂಗೆಡ್ಡೆಯ ಪ್ರಮುಖ ಅಂಶಗಳನ್ನು ನಾಶಮಾಡಿ ಕೇವಲ Carbohydrates ಸೇವಿಸಿದಂತೆ. ಜೊತೆಗೆ ಹೆಚ್ಚಿನ ತಾಪಮಾನದಲ್ಲಿ ಅಂದರೆ ಎಣ್ಣೆಯಲ್ಲಿ ಆಲೂಗೆಡ್ಡೆಯನ್ನು ಕರಿದರೆ ( deep fry ಮಾಡಿದರೆ ) ಅದರಿಂದ ಆಲೂಗೆಡ್ಡೆಯಲ್ಲಿರುವ ಎಲ್ಲಾ ಪೌಷ್ಟಿಕಗಳೂ ನಾಶವಾಗುವುದು. ಆದ್ದರಿಂದ ಆದಷ್ಟು ಆಲೂಗೆಡ್ಡೆಯನ್ನು ಚೆನ್ನಾಗಿ ತೊಳೆದು, ಸಿಪ್ಪೆ ಸಮೇತ ಬೇಯಿಸಿ ನಂತರ ಬೇಕಾದರೆ ಸಿಪ್ಪೆ ತೆಗೆದು ಸೇವಿಸಬಹುದು.

ಮತ್ತೊಂದು ತಿಳಿದುಕೊಳ್ಳಬೇಕಾದ ವಿಷಯವೆಂದರೆ ಯಾವುದೇ ಕಾರಣಕ್ಕೂ ಆಲೂಗೆಡ್ಡೆಯನ್ನು ಈರುಳ್ಳಿಯ ಜೊತೆ ಇಡಬಾರದು. ಕಾರಣ ಇವೆರಡರಿಂದಲೂ ಹೊರಹೊಮ್ಮುವ ನೈಸರ್ಗಿಕ ಅನಿಲಗಳು ( gas ) ಪರಸ್ಪರ ಬೇಗ ಕೊಳೆತು ಹೋಗುವಂತೆ ಮಾಡುತ್ತದೆ.

ಇನ್ನುಮುಂದೆ ಧೈರ್ಯವಾಗಿ ಆಲೂಗೆಡ್ಡೆ ತಿನ್ನಿ. ಆಲೂಗೆಡ್ಡೆ ತಿನ್ನುವುದರಿಂದ ದಪ್ಪ ಆಗಲ್ಲ, ಶುಗರ್ ಬರಲ್ಲ.

ಚಿತ್ರ, ಲೇಖನ :-  ಮಂಜುನಾಥ್ ಪ್ರಸಾದ್..

ಗರಿಕೆ ಹುಲ್ಲು

" ಗರಿಕೆ ಹುಲ್ಲು " ಎಲ್ಲರಿಗೂ ಗೊತ್ತು. ಗ್ರಾಮೀಣ ಭಾಷೆಯಲ್ಲಿ ಕರಿಕೆ , ಗರಿಕೆ , ಅಮರಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.

ಆಂಗ್ಲ ಭಾಷೆಯಲ್ಲಿ..Durva Grass, Doob Grass,
Devil Grass (cynodon dactylon ವೈಜ್ಞಾನಿಕ ಹೆಸರು) ಇನ್ನೂ ಹಲವಾರು ಹೆಸರುಗಳಿವೆ.

ಸಂಸ್ಕೃತ ಭಾಷೆಯಲ್ಲಿ...ಅಮರಿ , ಅಮೃತಾ , ದೂರ್ವಾ ಇತ್ಯಾದಿ.

ಹಿಂದಿ ಭಾಷೆಯಲ್ಲಿ...ದೂಬ್, ರಾಮಘಾಸ್, ದೂರ್ಬಾ ಇತ್ಯಾದಿ.

ತುಳಸಿಯ ನಂತರ ಗರಿಕೆ ಹುಲ್ಲು ಹೆಚ್ಚಿನ ಪ್ರಾಮುಖ್ಯತೆ  ಪಡೆದಿದೆ.

ಶ್ರೀ ಕೃಷ್ಣನಿಗೆ ತುಳಸಿಯ ಅರ್ಚನೆ ಮಾಡಿದರೆ, ವಿಘ್ನನಿವಾರಕ ಗಣೇಶನಿಗೆ ಗರಿಕೆ ಹುಲ್ಲಿನ ಅರ್ಚನೆ ಮಾಡಲಾಗುತ್ತದೆ.

ಗರಿಕೆ ಹುಲ್ಲು ಒಂದು ಕಡೆ ಬೇರು ಬಿಟ್ಟರೆ ಹಿಂದೆ ಹಾಗೇ ಬೇರುಗಳನ್ನು ಬಿಡುತ್ತ ತ್ವರಿತವಾಗಿ ಬೆಳೆಯುತ್ತದೆ. ಹೊಲದಲ್ಲಿ ಬೆಳೆಯಲು ಬಿಟ್ಟರೆ ನಿವಾರಿಸಲು ಬಹಳೇ ಕಷ್ಟ ಪಡಬೇಕಾಗುತ್ತದೆ. ಏಕೆಂದರೆ ಗರಿಕೆ ಹುಲ್ಲಿನ ಬೇರುಗಳು 01 ರಿಂದ 02 ಮೀಟರ್ ಆಳದವರೆಗೂ ಇಳಿದು ಬಿಡುತ್ತವೆ. 

ಸರ್ವ ರೋಗ ನಿವಾರಕವಾಗಿ ಕೆಲಸ ಮಾಡುವ ಈ ಗರಿಕೆ ಹುಲ್ಲಿಗೆ ಅಮೃತ ಹುಲ್ಲು ಎಂದೂ ಕರೆಯಲಾಗಿದೆ

        { ಗರಿಕೆ ಹುಲ್ಲಿನ ಪ್ರಯೋಜನಗಳು} 

* ಚರ್ಮರೋಗ ಗಳಿಗೆ... ಇದರ ರಸದಲ್ಲಿ ಅರಿಶಿನ ಪುಡಿ ಹಾಕಿ ಲೇಪಿಸಬೇಕು.  ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ ಯಲ್ಲಿ ಗರಿಕೆ ಹುಲ್ಲನ್ನು ಕುದಿಸಿ ಉಪಯೋಗಿ ಸಬಹುದು.

* 20 ರಿಂದ 30 ML ರಸ ಜೇನು ಬೆರೆಸಿ ಸೇವನೆ ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ.

* ಬೊಜ್ಜು ಕರಗಿಸಲು ಸಹಕಾರಿಯಾಗಿದೆ.

* ಹೊಟ್ಟೆ ನೋವಿಗೆ ರಸ ಸೇವನೆ ಉಪಯುಕ್ತವಾಗಿದೆ.

* ಹಾಲುಣಿಸುವ ತಾಯಂದಿರಿಗೆ ಒಳ್ಳೆಯದು.

*ವಸಡಿನ ರಕ್ತ ಸ್ರಾವ ನಿವಾರಕ ವಾಗಿ ಕೆಲಸ ಮಾಡುತ್ತದೆ.

*ಕಿವಿ ನೋವಿಗೆ, ಶುಭ್ರವಾದ ಬಟ್ಟೆಯಲ್ಲಿ ರಸ ಸೋಸಿ ನಾಲ್ಕೈದು ಹನಿ ಹಾಕಬಹುದು.

* ಮಧುಮೇಹಿಗಳಿಗೆ ಕೂಡ ಉತ್ತಮ.

*ಗರಿಕೆ ಹುಲ್ಲಿನ ರಸದಲ್ಲಿ ಕೊಬ್ಬರಿ ಎಣ್ಣೆ ಬೆರೆಸಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆ ಗಟ್ಟುತ್ತದೆ, ಕೇಶ ಕಾಂತಿ ಹೆಚ್ಚುತ್ತದೆ.

*ಉಗುರು ಸುತ್ತಿಗೆ... ರಸದಲ್ಲಿ ಅರಿಶಿನ ಮತ್ತು ಸುಣ್ಣ ಬೆರೆಸಿ ಹೆಚ್ಚಬೇಕು.

* ಬೆಳೆಯುವ ಮಕ್ಕಳಿಗೆ 10ML ರಸಕ್ಕೆ ಜೇನು ಬೆರೆಸಿ ಕುಡಿಸಬೇಕು.

*ಕಣ್ಣು ನೋವು, ಕಣ್ಣುಗಳು ಕೆಂಪಾದಾಗ ಗರಿಕೆ ಹುಲ್ಲನ್ನು ಕುಟ್ಟಿ ಕಣ್ಣುಗಳನ್ನು ಮುಚ್ಚಿ ಬಿಳಿ ಬಟ್ಟೆ ಹಾಕಿಕೊಂಡು ರೆಪ್ಪೆಗಳ ಮೇಲೆ ಇಡಬೇಕು.

*ಗರಿಕೆ ಹುಲ್ಲಿನ ರಸದಲ್ಲಿ ಕಲ್ಲು ಸಕ್ಕರೆ ಸೇರಿಸಿ ಸೇವಿಸಿದರೆ ಉರಿ ಮೂತ್ರ ನಿವಾರಕ ವಾಗಿ ಕೆಲಸ ಮಾಡುತ್ತದೆ.

    ಪ್ರೋಟಿನ್, ವಿಟಮಿನ್, ಕಾರ್ಬೋಹೈಡ್ರೇಟ್, ಮೆಗ್ನೀಷಿಯಂ, ಸೋಡಿಯಂ ಇತ್ಯಾದಿ ಅಂಶಗಳು ಇರುವ ಈ ಗರಿಕೆ ಹುಲ್ಲಿನ ರಸ ಸೇವನೆ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ. S.H.Nadaf

ಮಹಿಳೆಯರಿಗೆ ಅನುಕೂಲವಾಗುವ ಸುಲಭವಾದ ಅಡುಗೆ ಮನೆ ಟಿಪ್ಸ್

ಮಹಿಳೆಯರಿಗಾಗಿ ಕೆಲವು ಸುಲಭವಾದ ಅಡುಗೆ ಮನೆಯ ಬಗ್ಗೆ ಅಡುಗೆ ಮನೆಯನ್ನ ಸ್ವಚ್ಛವಾಗಿ ಇಟ್ಟುಕೊಳ್ಳೋಕೆ ಕೆಲವು ಟಿಪ್ಸ್ ಹಾಗೂ ಟ್ರಿಕ್ಸ್ ಗಳನ್ನು ಇಲ್ಲಿ ತಿಳಿಸಿದ್ದೇವೆ. ಬಟ್ಟೆಯ ಮೇಲೇ ಆಗುವಂತಹ ಪೆನ್ ಅಥವಾ ಪೆನ್ಸಿಲ್ ನ ಮಾರ್ಕ್ ಅನ್ನು ಹೇಗೆ ತೆಗೆಯೋದು ಅನ್ನೋದನ್ನ ನೋಡೋಣ. ಈ ತರ ಮಾರ್ಕ್ ಆದಾಗ ನೇಲ್ ಪಾಲಿಶ್ ರಿಮೂವರ್ ಅನ್ನು ಬಳಸಿ ತೆಗೆಯಬಹುದು. ಪೆನ್ ಇಂದ ಮಾರ್ಕ್ ಆದ ಬಟ್ಟೆಯ ಮೇಲೆ ಒಂದೆರಡು ಹನಿ ನೈಲ್ ಪಾಲಿಶ್ ರಿಮೂವರ್ ಹಾಕಿ ಒಂದು ಒಣಗಿದ ಬಟ್ಟೆಯಿಂದ ಒರೆಸಿದರೆ ಮಾರ್ಕ್ ಗಳು ಹೋಗತ್ತೇ.

ಫ್ರಿಡ್ಜ್ ಮೇಲೆ ಆಗಿರುವ ಒದ್ದೆ ಕೈ ಇಂದ ಮುಟ್ಟಿದ ಕಲೆ ಇರಬಹುದು ಅಥವಾ ಎಣ್ಣೆಯ ಕಲೆ ಇವನ್ನೆಲ್ಲ ಹೇಗೆ ತೆಗಿಯೋದು ಅನ್ನೋದನ್ನ ನೋಡೋಣ. ಒಂದೋ ಬೌಲ್ ಗೆ ಇಂದು ಟೀ ಸ್ಪೂನ್ ಅಡುಗೆ ಸೋಡಾ ಹಾಗೂ ಒಂದೂವರೆ ಸ್ಪೂನ್ ಅಷ್ಟು ವಿನೆಗರ್ ಹಾಕಿ ಮಿಕ್ಸ್ ಮಾಡಿ, ಒಂದು ಸ್ಕ್ರಬರ್ ನಿಂದ ವಿನೆಗರ್ ಸೋಡಾ ಮಿಶ್ರಣವನ್ನು ಹಚ್ಚಿ ನಂತರ ಒದ್ದೆ ಬಟ್ಟೆ ಇಂದ ಒರೆಸಿ ನಂತರ ಒಣಗಿದ ಬಟ್ಟೆಯಿಂದ ಇರೆಸಿದ್ರೆ ಕ್ಲೀನ್ ಆಗತ್ತೆ. ಈ ರೀತಿ ವಾರಕ್ಕೆ ಒಮ್ಮೆ ಆದರೂ ಮಾಡುವುದರಿಂದ ಫ್ರಿಡ್ಜ್ ಮೇಲೆ ಕಲೆಗಳು ಆಗಲ್ಲ.

ಬಾಚಣಿಗೆಯಲ್ಲಿ ಇರುವಂತಹ ಕೊಳೆಯನ್ನ ತೆಗಿಯೋದು ತುಂಬಾ ಕಿರಿಕಿರಿ. ಸೂಜಿ ಅಥವಾ ಪಿನ್ ತಗೊಂಡು ಒಂದೊಂದೇ ಹಲ್ಲಿನಲ್ಲಿ ಕೆಸರನ್ನ ತೆಗಿಯೋಕೆ ಬೇಜಾರು ಅಂದ್ರೆ ಹೀಗೆ ಮಾಡಿ ಒಂದು ಟಬ್ ನಲ್ಲಿ ನೀರು ಹಾಕಿ ಬಾಚಣಿಕೆಯನ್ನ ಇಟ್ಟು ಸ್ವಲ್ಪ ವಿಮ್ ಜೆಲ್ ಅಥವಾ ಬಟ್ಟೆ ಸೋಪು ಏನಾದರೂ ಬಳಸಿಕೊಂಡು ಬಟ್ಟೆ ತಿಕ್ಕುವ ಬ್ರಶ್ ನಿಂದ ತಿಕ್ಕಿದರೆ ಒಮ್ಮೆಗೆ ಬಾಚಣಿಗೆಯಲ್ಲಿನ ಕೆಸರು ಹೋಗತ್ತೆ ಎಣ್ಣೆಯ ಜಿಡ್ಡೂ ಕೂಡಾ ಹೋಗತ್ತೆ.

ಇನ್ನೂ ಕೆಲವೊಮ್ಮೆ ಅಡುಗೆ ಮನೆಯಲ್ಲಿ ಎಣ್ಣೆ ಜಿಡ್ಡು ಎಲ್ಲವೂ ಸೇರಿ ಟೈಲ್ಸ್ ಕೂಡಾ ಕಲೆ ಆಗಿರತ್ತೆ. ಹಾಗಾಗಿ ಸೋಡಾ ಮತ್ತೆ ವಿನೆಗರ್ ಅನ್ನು ಮಿಕ್ಸ್ ಮಾಡಿ ಸ್ಕ್ರಬರ್ ನಿಂದ ಟೈಲ್ಸ್ ಮೇಲೆ ಹಚ್ಚಿ ಸ್ವಚ್ಛ ಮಾಡುವುದರಿಂದ ಕಲೆಗಳು ಹೋಗತ್ತೆ. ನಂತರ ಒಂದು ಬಟ್ಟೆಯಿಂದ ಒರೆಸಬೇಕು. ಇನ್ನು ಅಡುಗೆಮನೆಯ ಸಿಂಕ್ ಅಲ್ಲಿ ಕೆಟ್ಟ ವಾಸನೆ ಅಥವಾ ಏನಾದರೂ ಕಟ್ಟಿ ನೀರು ಸರಿಯಾಗಿ ಹೋಗ್ತಾ ಇರಲ್ಲ. ಆಗ ಅದಕ್ಕೆ ಸಿಂಕ್ ಅಲ್ಲಿ ಒಂದು ಸ್ಪೂನ್ ಉಪ್ಪು, ಒಂದು ಸ್ಪೂನ್ ಅಡುಗೆ ಸೋಡಾ ಹಾಗೂ ಕಾಲು ಕಪ್ ಅಷ್ಟು ವಿನೆಗರ್ ಅನ್ನು ಹಾಕಬೇಕು ಇದರಿಂದ ಪೈಪ್ ನಲ್ಲಿ ಏನಾದರೂ ಬ್ಲಾಕ್ ಆಗಿದ್ದರೂ ಸಹ ಹೋಗತ್ತೆ. ನಂತರ ಸ್ವಲ್ಪ ಹೊತ್ತು ಬಿಟ್ಟು ಬಿಸಿ ನೀರನ್ನ ಮೇಲಿನಿಂದ ಸುರಿಯಬೇಕು.


ಅಡುಗೆ ಮನೆಯ ಟೈಲ್ಸ್, ಗ್ಯಾಸ್ ಸ್ಟೋವ್, ಮನೆಯ ಕಪಾಟ್ ಇವುಗಳ ಮೇಲೆ ನೊಣಗಳು ಕುಳಿತಿರತ್ತೆ ಇದಕ್ಕೆ ಒಂದು ಬೌಲ್ ಗೆ ಎರಡು ಸ್ಪೂನ್ ವಿನೆಗರ್ ಮತ್ತು ಒಂದು ಸ್ಪೂನ್ ಉಪ್ಪು ಸೇರಿಸಿ ಆ ಲಿಕ್ವಿಡ್ ಅನ್ನು ಈ ಎಲ್ಲಾ ಕಡೆ ಹಚ್ಚುವುದರಿಂದ ಮನೆಯಲ್ಲಿ ಇರುವೆಗಳು ಅಥವಾ ನೊಣಗಳು ಬಂದು ಕೂರಲ್ಲ. ಸಾಮಾನ್ಯವಾಗಿ ಎಲ್ಲರೂ ಒಣ ಮೆಣಸಿನಕಾಯಿಯನ್ನ ತಂದು ಇಟ್ಟುಕೊಂಡಿರುತ್ತೇವೆ. ಆದರೆ ಇದು ಹಾಗೆ ಇಟ್ಟಾಗ ಮೇಲಿಂದ ಸ್ವಲ್ಪ ಬೂಸ್ಟ್ ಬಂದ ಹಾಗೆ ಆಗತ್ತೆ. ಅದಕ್ಕೆ ಮೆಣಸಿನಕಾಯಿಯನ್ನ 4ರಿಂದ 5 ಬಿಸಿಲು ಸರಿಯಾಗಿ ಒಣಗಿಸಿ ನಂತತ ಅಡತ ಚೊಟ್ಟು ತೆಗೆಯದೇ ಹಾಗೆ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಹಾಕಿ ಒಂದು ಡಬ್ಬದಲ್ಲಿ ಹಾಕಿ ಇಟ್ಟುಕೊಳ್ಳಬೇಕು. ಇದರಿಂದ ಮೆಣಸಿನಕಾಯಿ ಹಾಲು ಆಗಲ್ಲ ಹುಳ ಕೂಡ ಆಗಲ್ಲ.


ಇನ್ನೂ ಸಾಂಬಾರ್ ಪೌಡರ್ ನ ಜಾಸ್ತಿ ಮಾಡಿಟ್ಟುಕೊಂಡರೆ ಬೇಗ ಹಾಳು ಆಗತ್ತೆ ಅನ್ನೋ ಚಿಂತೆ ಇದ್ರೆ, ಒಂದು ಸಾಂಬಾರ್ ಪುಡಿ ಮಾಡಬೇಕಾದರೆ ಅದಕ್ಕೆ ಅರಿಷಿನವನ್ನು ಸೇರಿಸಿಕೊಳ್ಳಬೇಕು ಇಲ್ಲವಾದಲ್ಲಿ ಅರ್ಧ ಟೀ ಸ್ಪೂನ್ ಉಪ್ಪನ್ನು ಸೇರಿಸಿ ಮಿಕ್ಸ್ ಮಾಡಿ ಇಟ್ಟರೆ ಹಾಳಾಗದೆ ಇರತ್ತೆ. ಹೊಸದಾದ ಸ್ಟೀಲ್ ಪಾತ್ರೆಯ ಮೇಕೆ ಸ್ಟಿಕರ್ ಇರತ್ತೆ ಕೆಲವೊಮ್ಮೆ ಅದನ್ನ ಹಾಗೆಯೇ ತೆಗಿಯೋಕೆ ಹೋದ್ರೆ ಸರಿಯಾಗಿ ಕಿತ್ತು ಬರಲ್ಲ ಹಾಗಾಗಿ ಆ ಸ್ಟಿಕರ್ ಮೇಲೆ ಕೋಬ್ವರಿ ಎಣ್ಣೆ ಅಥವಾ ಯಾವುದೇ ಅಡುಗೆ ಎಣ್ಣೆಯನ್ನು ಹಚ್ಚಿ ಸ್ಟೋವ್ ಮೇಲೆ ಇಟ್ಟು ಸಣ್ಣ ಉರಿಯಲ್ಕಿ ಒಂದೆರಡು ನಿಮಿಷ ಕಾಯಿಸಿದರೆ ಸ್ಟಿಕರ್ ಪೂರ್ತಿಯಾಗಿ ಕಿತ್ತು ಬರತ್ತೆ.

ಇನ್ನೂ ಈರುಳ್ಳಿ ಅಥವಾ ಬೆಳ್ಳುಳ್ಳಿ ಕಟ್ ಮಾಡಿದಾಗ ಕೈ ವಾಸನೆ ಬರುತ್ತಾ ಇರತ್ತೆ ಆಗ ನಿಂಬೆ ಹಣ್ಣಿನ ರಸವನ್ನು ಕೈ ಗೆ ಎಲ್ಲ ಕಡೆ ಹಚ್ಚಿಕೊಳ್ಳುವುದರಿಂದ ಕೈ ವಾಸನೆ ಹೋಗತ್ತೆ. ಫ್ರಿಡ್ಜ್ ಇಲ್ಲದೆ ಇರುವವರು ಮೊಸರನ್ನು ಹುಳಿ ಬರದ ಹಾಗೆ ಹೇಗೆ ಇಡೋದು ಅಂತ ಚಿಂತೆ ಮಾಡ್ತಾ ಇರ್ತಾರೆ. ಅದಕ್ಕೆ ಒಂದು ಬಟ್ಟಲಿನಲ್ಲಿ ಎರಡು ಕಪ್ ನೀರು ಹಾಕಿ ಅದರಲ್ಲಿ ಮೊಸರನ್ನ ಇಟ್ಟು ಮುಚ್ಚಿ ಇಡಬೇಕು. ಇದರಿಂದ ಮೊಸರು ಹುಳಿ ಬರಲ್ಲ. ಗೋಡೆಯ ಮೇಲೆ ಮಕ್ಕಳು ತಬಾ ಗೀಚುವುದು ಬರೆಯುವುದು ಮಾಡುತ್ತಾರೆ ಅದಕ್ಕೆ ನೈಲ್ ಪಾಲಿಶ್ ರಿಮೂವರ್ ಇಂದ ಒರೆಸಿದರೆ ಹೋಗತ್ತೆ.

ಬಟ್ಟೆಯ ಮೇಲೆ ಎಣ್ಣೆ ಕಲೆ ಅಥವಾ ಏನಾದರೂ ಸೊನೆ ತಾಗಿ ಕಲೆ ಆಗಿದ್ದರೆ ಅದಕ್ಕೂ ಕೂಡಾ ನೈಲ್ ಪಾಲಿಶ್ ರಿಮೂವರ್ ಹಾಕಿ ಹಚ್ಚಿ ನಂತರ ಸೋಪ್ ಬಳಸಿ ಬ್ರಶ್ ಮಾಡುವುದರಿಂದ ಹೋಗತ್ತೆ.
ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಉರತ್ತೆ. ನೈಲ್ ಪಾಲಿಶ್ ತಂದು ತುಂಬಾ ದಿನ ಆಗಿದ್ರೆ ಹಾಗೇ ಗಟ್ಟಿ ಆಗತ್ತೆ ಅದಕ್ಕೆ ಒಂದೆರಡು ಹನಿ ನೈಲ್ ಪಾಲಿಶ್ ರಿಮೂವರ್ ಹಾಕಿ ಸ್ವಲ್ಪ ಶೇಕ್ ಮಾಡಿದ್ರೆ ಸರಿ ಆಗತ್ತೆ. ಒಮ್ಮೊಮ್ಮೆ ಅಡುಗೆ ಮನೆಯಲ್ಲಿ ಸಿಹಿ ಪದಾರ್ಥಗಳು ಬಿದ್ದು ಇರುವೆ ಬರತ್ತೆ ಆಗ 5/6 ಪುಡಿ ಮಾಡಿದ ಕರ್ಪೂರ, ಒಂದು ಸ್ಪೂನ್ ಅರಿಶಿನ ಹಾಗೂ ಅರ್ಧ ಸ್ಪೂನ್ ಉಪ್ಪು ಮೂರನ್ನೂ ಮಿಕ್ಸ್ ಮಾಡಿ, ಇರುವೆ ಬಂದ ಜಾಗಕ್ಕೆ ಹಾಕಿದ್ರೆ ಇರುವೆ ಹಾಗೂ ಜಿರಳೆಗಳೂ ಸಹ ಹೋಗತ್ತೆ.ತುಂಬಾ ಸುಲಭವಾಗಿ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ಈ ರೀತಿಯಾಗಿ ಪೂರ್ತಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು.